ಅನ್ಯರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದು ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ : ಬಿಜೆಪಿ
ವಿವಿಧ ರಾಜ್ಯ ಪ್ರಯೋಜನಗಳು, ಸರ್ಕಾರಿ ದಾಖಲೆಗಳು, ಶೈಕ್ಷಣಿಕ ಪ್ರವೇಶಗಳು, ಉದ್ಯೋಗಾವಕಾಶಗಳು ಮತ್ತು ಇತರ ಅರ್ಹತೆಗಳನ್ನು ಪಡೆಯಲು ಇದನ್ನು ಅವಲಂಬಿಸುವ ಅಪಾಯವಿದೆ -ಎ ಕಳವಳ
ಅಸ್ಮಿತೆ ವರದಿ, ಜು.13: ಅನ್ಯ ರಾಜ್ಯ ಹಾಗೂ ವಿದೇಶಿಗರಿಗೆ ಕರ್ನಾಟಕ ಸರ್ಕಾರ ಶಾಶ್ವತ ನಿವಾಸ ಪ್ರಮಾಣಪತ್ರ (ಪಿಆರ್ಸಿ) ರಾಜ್ಯ ಸರ್ಕಾರ ಮುಂದಾಗಿರುವುದು ಸಾಂವಿಧಾನಿಕ ಚೌಕಟ್ಟಿಗೆ ವಿರುದ್ದವಾದ ನಿರ್ಧಾರವಾಗಿದೆ. ಈ ಪ್ರಕ್ರಿಯೆ ತಡೆಯಲು ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು ಎಂದು ಬೆಳಗಾವಿ ಜಿಲ್ಲಾ ಬಿಜೆಪಿ ಮನವಿ ಮಾಡಿದೆ.
ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಷ್ ಪಾಟೀಲ, ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷೆ ಗೀತಾ ಸುತಾರ, ಮುಖಂಡರಾದ ಎಂ.ಬಿ. ಜಿರಲಿ, ರಾಜೇಂದ್ರ ಹರಕುಣಿ, ರಾಜಶೇಖರ ಡೋಣಿ, ಮುರಗೇಂದ್ರಗೌಡ ಪಾಟೀಲ,ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಯಲ್ಲೇಶ ಕೋಲಕಾರ, ಉಜ್ವಲಾ ಬಡವನಾಚೆ, ಕೋಶಾಧ್ಯಕ್ಷ ಸಂತೋಷ ದೇಶನೂರ, ಪ್ರಸಾದ ದೇವರಮನಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೆಳಗಾವಿ ಜಿಲ್ಲಾ ಅಧಿಕಾರಿ ಮೂಲಕ ಮನವಿ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿದರು.
ಬಿಜೆಪಿ ಮುಖಂಡ ಎಂ.ಬಿ.ಜಿರಲಿ ಮಾತನಾಡಿ ಬಾಂಗ್ಲಾದೇಶ ಮಾತ್ರವಲ್ಲದೇ ಪಶ್ಚಿಮ ಬಂಗಾಳದಿಂದ ಲಕ್ಷಾಂತರ ಮಂದಿ ಕರ್ನಾಟಕಕ್ಕೆ ಬಂದಿದ್ದಾರೆಂಬ ಮಾಹಿತಿ ಇದೆ. ಸರ್ಕಾರ ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರ (ಪಿಆರ್ಸಿ) ನೀಡುವುದರಿಂದ ಕರ್ನಾಟದ ಪ್ರಜೆಗಳಿಗೆ ಇದರಿಂದ ತೊಂದರೆ ಆಗಲಿದೆ. ನೀರು, ಆಹಾರ, ಪಡಿತರಚೀಟಿ ಸವಲತ್ತುಗಳು ಅವರಿಗೆ ಸಿಗಲಿದ್ದು, ರಾಜ್ಯದ ಪೌರರ ಸೌಲಭ್ಯಗಳು ಕಡಿಮೆ ಆಗಲಿದೆ. ಅಪರಾಧ ಪ್ರಮಾಣವೂ ಹೆಚ್ಚಾಗುವ ಭೀತಿ ತಲೆದೋರಿದೆ. ಕಾನೂನು ಸುವ್ಯವಸ್ಥೆಯೂ ನಿಯಂತ್ರಣದಲ್ಲಿ ಇಲ್ಲದ ಪರಿಸ್ಥಿತಿ ಬರಲಿದೆ. ಭಾರತದ ಸಂವಿಧಾನವು ದೇಶಾದ್ಯಂತ ಎಲ್ಲಾ ನಾಗರಿಕರಿಗೆ ಒಂದೇ ಪೌರತ್ವವನ್ನು ಕಲ್ಪಿಸುತ್ತದೆ. ಆದರೆ, ಕರ್ನಾಟಕ ಸರ್ಕಾರವು "ಶಾಶ್ವತ ನಿವಾಸ ಪ್ರಮಾಣಪತ್ರ" ವನ್ನು ನೀಡುವುದು ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ ಎಂದು ಹೇಳಿದರು
ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಮಾತನಾಡಿ, ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದ ಸರ್ಕಾರ ನಿರ್ಧಾರ ಅತ್ಯಂತ ಆತಂಕಕಾರಿಯಾಗಿದೆ.ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಅಥವಾ ರಾಜ್ಯದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವ ವ್ಯಕ್ತಿಗಳು ಸ್ಥಳೀಯ ದಾಖಲೆಗಳನ್ನು ನೀಡುವ ಮೂಲಕ ಅಥವಾ ಮೋಸದ ವಿಧಾನಗಳ ಮೂಲಕ ಶಾಶ್ವತ ನಿವಾಸ ಪ್ರಮಾಣಪತ್ರವನ್ನು ಪಡೆಯಬಹುದು. ಈ ಪ್ರಮಾಣಪತ್ರವನ್ನು ನೀಡಿದ ನಂತರ, ವಿವಿಧ ರಾಜ್ಯ ಪ್ರಯೋಜನಗಳು, ಸರ್ಕಾರಿ ದಾಖಲೆಗಳು, ಶೈಕ್ಷಣಿಕ ಪ್ರವೇಶಗಳು, ಉದ್ಯೋಗಾವಕಾಶಗಳು ಮತ್ತು ಇತರ ಅರ್ಹತೆಗಳನ್ನು ಪಡೆಯಲು ಇದನ್ನು ಅವಲಂಬಿಸುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದರು
ಮಾಜಿ ಶಾಸಕ ಸಂಜಯ ಪಾಟೀಲ, ಪೌರತ್ವ, ವಿದೇಶಿಯರು, ವಲಸೆ ಮತ್ತು ಆಂತರಿಕ ಭದ್ರತೆಗೆ ಸಂಬಂಧಿಸಿದ ವಿಷಯಗಳು ಕೇಂದ್ರ ಸರ್ಕಾರದ ವಿಶೇಷ ಅಧಿಕಾರವ್ಯಾಪ್ತಿಯಡಿ ಬರುತ್ತವೆ. ಕೂಡಲೇ ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರು ಮದ್ಯಪ್ರವೇಶ ಮಾಡಬೇಕೆಂದು ಹೇಳಿದರು.
ಈ ಲೇಖನ ಹಂಚಿಕೊಳ್ಳಿ