ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ"
ಅರವಿಂದ ಪಾಟೀಲರ ಮನೆಯಲ್ಲಿ 'ತುಘಲಕ್'ಪ್ರಸ್ತುತಿ
ಅಸ್ಮಿತೆ ವರದಿ, ಸೆ.೦೭: ತೇಜೋಮಯ ಸಂಸ್ಥೆಯ ಅಧ್ಯಕ್ಷರೂ ರಂಗ ಕಲಾವಿದರೂ ಆದ ಬೆಳಗಾವಿಯ ಅರವಿಂದ ಪಾಟೀಲರ ಮನೆಯಲ್ಲಿ ಕನ್ನಡದ ಖ್ಯಾತ ನಾಟಕಕಾರ, ಜ್ಞಾನ ಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಅವರ ಪ್ರಸಿದ್ದವಾದ ' ತುಘಲಕ್' ನಾಟಕದ ಓದುವ ವಿಶೇಷ ಕಾರ್ಯಕ್ರಮ ಜರುಗಿತು.
ವಿನೋದ ಸಪ್ಪಣ್ಣವರ, ಉಮೇಶ್ ಕರ್ಲಿಂಗನ್ನವರ, ಪ್ರೇಮ ನಿರಗಟ್ಟಿ, ಬಸವರಾಜ ತಳವಾರ, ಸಿದ್ಧು, ಪ್ರಸನ್ನ, ಐಶ್ವರ್ಯ, ಶೋಭಾ ಮಾಳಿ, ರವಿ ಕೆ ಮೊದಲಾದ ಆಯ್ದ ರಂಗಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒಬ್ಬಬ್ಬರು ಒಂದೊಂದು ಪಾತ್ರ ಮತ್ತು ಸನ್ನಿವೇಶಗಳು ಓದಿ ಅಂಗೈಮೇಲೆ ರಂಗಭೂಮಿ ಸೃಷ್ಟಿಸಿ ರಸಾನುಭವ ನೀಡಿದರು ಮತ್ತು ಪಡೆದರು.
ಈ ಸಂದರ್ಭದಲ್ಲಿ ನಾಟಕ ಓದುವಿನ ಪ್ರಕ್ರಿಯೆ ನೀಡಿದ ಬರಹಗಾರ, ಕಲಾವಿದ ಅನಂತ ಪಪ್ಪು, " ನಾಟಕ ಎಂದರೆ ಕೇವಲ ವೇದಿಕೆಯ ಮೇಲೆ ಕಲಾವಿದರು ಅಭಿನಯಿಸುವ ಕಲೆಯಲ್ಲ. ಅದು ಮೊದಲು ಮಾತಿನಲ್ಲಿ ಹುಟ್ಟುತ್ತದೆ, ಓದಿನಲ್ಲಿ ರೂಪ ಪಡೆಯುತ್ತದೆ, ಕಲ್ಪನೆಯಲ್ಲಿ ಜೀವ ಪಡೆದು, ನಂತರ ರಂಗದ ಮೇಲೆ ದೃಶ್ಯವಾಗುತ್ತದೆ. ಈ ದೃಷ್ಟಿಯಿಂದ ನಾಟಕ ರೀಡಿಂಗ್ ಒಂದು ಅತ್ಯಂತ ಮಹತ್ವದ ಸೃಜನಶೀಲ ಪ್ರಕ್ರಿಯೆ.
ನಾಟಕವನ್ನು ಓದುವಾಗ ಪಾತ್ರಗಳ ಧ್ವನಿ, ಅವರ ಭಾವನೆ, ಸಂಘರ್ಷ, ಸಂಬಂಧಗಳು ಮತ್ತು ನಿರ್ದೇಶಕರ ಕಲ್ಪನೆಗಳು ನಮ್ಮ ಮುಂದೆ ನಿಧಾನವಾಗಿ ತೆರೆದುಕೊಳ್ಳುತ್ತವೆ. ವೇದಿಕೆಯ ಸಿದ್ಧತೆಯ ಮೊದಲ ಹೆಜ್ಜೆಯೇ ನಾಟಕ ರೀಡಿಂಗ್" ಎಂದು ತಿಳಿಸಿದರು.

ಈ ಬಗೆಯ ಕಾರ್ಯಕ್ರಮಗಳು ನಾಟಕಕಾರ, ನಿರ್ದೇಶಕ ಮತ್ತು ಕಲಾವಿದರ ನಡುವೆ ಉತ್ತಮ ಸಂವಾದ ಸೃಷ್ಟಿಸುತ್ತವೆ. ನಾಟಕದ ಶಕ್ತಿಯ ಜೊತೆಗೆ ಅದರ ದೌರ್ಬಲ್ಯಗಳನ್ನೂ ಗುರುತಿಸಲು ಇದು ಅವಕಾಶ ನೀಡುತ್ತದೆ. ಮುಖ್ಯವಾಗಿ, ಪ್ರೇಕ್ಷಕರಾಗಿ ನಾಟಕವನ್ನು ಕೇವಲ ನೋಡುವುದಲ್ಲ, ಅದರ ಒಳಗಿನ ಆಶಯವನ್ನು ಅರ್ಥಮಾಡಿಕೊಳ್ಳುವ ಅವಕಾಶವೂ ಇಲ್ಲಿ ದೊರೆಯುತ್ತದೆ.ಈ ಬಗೆಯ ಓದುವ ಪರಂಪರೆ ರಂಗ ಪ್ರಕ್ರಿಯೆಯ ಸೃಜನಶೀಲ ಬೆಳವಣಿಗೆಗೆ ಕಾರಣವಾಗಲಿ" ಎಂದು ತಿಳಿಸಿದರು.
'ತುಘಲಕ್’ ನಾಟಕ ಕೇವಲ ಇತಿಹಾಸದ ಕಥೆಯಾಗಿರದೆ ಸಮಕಾಲೀನ ರಾಜಕೀಯ, ಅಧಿಕಾರದ ಮನೋಭಾವ, ಆಡಳಿತದ ವೈರುಧ್ಯಗಳು ಮತ್ತು ಆದರ್ಶ–ವಾಸ್ತವಗಳ ನಡುವಿನ ಸಂಘರ್ಷವನ್ನು ಪ್ರತಿಬಿಂಬಿಸುತ್ತದೆ. ಮೊಹಮ್ಮದ್ ಬಿನ್ ತುಘಲಕ್ನ ದೊಡ್ಡ ಕನಸುಗಳು, ಹೊಸ ಆಲೋಚನೆಗಳು, ವಿಚಿತ್ರ ನಿರ್ಧಾರಗಳು ಮತ್ತು ಅವುಗಳಿಂದ ಉಂಟಾಗುವ ಪರಿಣಾಮಗಳ ಮೂಲಕ ಇಂದಿನ ಸಮಾಜದ ಅನೇಕ ಪ್ರಶ್ನೆಗಳನ್ನು ಪ್ರೇಕ್ಷಕರ ಮುಂದಿಡುವ ಸಾಧ್ಯತೆ ಈ ನಾಟಕದಲ್ಲಿದೆ " ಎಂದು ಅರವಿಂದ ಪಾಟೀಲ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
"ಇತಿಹಾಸದ ಘಟನೆಗಳ ಮೂಲಕ ವರ್ತಮಾನವನ್ನು ಪ್ರಶ್ನಿಸುವ ಅವಕಾಶ, ಪಾತ್ರಗಳ ಮನೋವೈಜ್ಞಾನಿಕ ಸಂಘರ್ಷ, ತೀಕ್ಷ್ಣ ಸಂಭಾಷಣೆ ಮತ್ತು ರಾಜಕೀಯ ವ್ಯಂಗ್ಯ ನನ್ನನ್ನು ವಿಶೇಷವಾಗಿ ಆಕರ್ಷಿಸಿವೆ. ಆದ್ದರಿಂದ ‘ತುಘಲಕ್’ ಅನ್ನು ಕೇವಲ ಐತಿಹಾಸಿಕ ನಾಟಕವಾಗಿ ನೋಡದೆ, ನಮ್ಮ ಕಾಲವನ್ನು ನಮ್ಮದೇ ಕನ್ನಡಿಯಲ್ಲಿ ನೋಡಿಕೊಳ್ಳುವ ರಂಗಪ್ರಯೋಗವಾಗಿ ರೂಪಿಸಬೇಕು ಎಂಬ ಉದ್ದೇಶದಿಂದ ಈ ನಾಟಕವನ್ನು ನಿರ್ದೇಶಿಸಲು ಮುಂದಾಗಿದ್ದೇನೆ" ಎಂದು ಅರವಿಂದ ಪಾಟೀಲ ಹೇಳಿದರು.
***
ಈ ಲೇಖನ ಹಂಚಿಕೊಳ್ಳಿ