ತುಂಬಿದ ಜೀವಜಲ : ಹಸಿರಾದ ಇಳೆ, ಖುಷಿಗೊಂಡ ರೈತ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿಯಮಿತ ಮಳೆಯಾಗುತ್ತಿದ್ದಂತೆ ಕೃಷ್ಣಾ ಹಾಗೂ ಅದರ ಉಪ ನದಿಗಳಾದ ವೇದಗಂಗಾ, ದೂದಗಂಗಾ ನದಿಗಳು ಮೈದುಂಬಿಕೊಂಡು ಹರಿಯಲು ಪ್ರಾರಂಭಿಸುವುದು ಪ್ರಕೃತಿಕ ಸಹಜ ಕ್ರಿಯೆ. ಇದರಿಂದ ಬೆಳಗಾವಿ ಜಿಲ್ಲೆಯ ಕೆಳಹಂತದ ಸಣ್ಣ ಪುಟ್ಟ ಸೇತುವೆಗಳು ನೀರಿನಲ್ಲಿ ಮುಳುಗುತ್ತವೆ. ನದಿಪಾತ್ರದಲ್ಲಿರುವ ದೇವಾಲಯಗಳಲ್ಲೂ ನೀರು ಪ್ರವೇಶಿಸುತ್ತದೆ. ಇದು ಪ್ರತಿ ವರ್ಷ ನಡೆಯುವ ಸಹಜತೆ. ಅನ್ನ ನೀಡುವ ರೈತರ ಜೀವಕಳೆ ತುಂಬಿ ಕ್ರಿಯೆಯನ್ನು ಸಂಭ್ರಮಿಸಿದರೆ ರೈತ ಇನ್ನಷ್ಟು ಉತ್ಸಾಭರಿತನಾಗುತ್ತಾನೆ.
ಅಸ್ಮಿತೆ ವರದಿ : ಜು.೦೭: ಮೇ ತಿಂಗಳಿನಲ್ಲಿ ಸುರಿದ ಪೂರ್ವ ಮುಂಗಾರು ಮಳೆ ರೈತನಿಗೆ ಹೊಲ ಪ್ರವೇಶಿಸಲು ಅನುಮತಿ ನೀಡಿ ಜೂನ ತಿಂಗಳ ಮಾಯವಾಗಿ ನಿರಾಸೆ ಮೂಡಿಸಿತ್ತು. ಕೈಕೊಟ್ಟ ಮಳೆ ಎಂದು ಆತಂಕ ಎದುರಿಸುತ್ತಿದ್ದಂತೆ ಜುಲೈ ಆರಂಭವಾಗುತ್ತಿದ್ದಂತೆ ಆಗಮಿಸಿ, ಹೊಸ ಜೀವ ತುಂಬಿ ಹಳದಿಗೆ ತಿರುಗುತ್ತಿದ್ದ ಬೆಳೆಗಳಿಗೆ ಹಸಿರು ಉಡಿಸಿ ಇಡೀ ಇಳೆಯನ್ನು ಶೃಂಗರಿಸಿದೆ. ಇಳಿಯ ಶೃಂಗಾರ ಕಣ್ತುಂಬಿಕೊಂಡ ರೈತ ಮಂದಹಾಸ ಮೂಡಿಸಿದ್ದಾನೆ. ಕುಡಿಯುವ ನೀರಿಗಾಗಿ ಹಪಹಪಿಸುತ್ತಿದ್ದ ಜನರು ನೆಮ್ಮದಿಯ ನಿಟ್ಟೂಸಿರು ಬಿಟ್ಟಿದ್ದಾರೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿಯಮಿತ ಮಳೆಯಾಗುತ್ತಿದ್ದಂತೆ ಕೃಷ್ಣಾ ಹಾಗೂ ಅದರ ಉಪ ನದಿಗಳಾದ ವೇದಗಂಗಾ, ದೂದಗಂಗಾ ನದಿಗಳು ಮೈದುಂಬಿಕೊಂಡು ಹರಿಯಲು ಪ್ರಾರಂಭಿಸುವುದು ಪ್ರಕೃತಿಕ ಸಹಜ ಕ್ರಿಯೆ. ಇದರಿಂದ ಬೆಳಗಾವಿ ಜಿಲ್ಲೆಯ ಕೆಳಹಂತದ ಸಣ್ಣ ಪುಟ್ಟ ಸೇತುವೆಗಳು ನೀರಿನಲ್ಲಿ ಮುಳುಗುತ್ತವೆ. ನದಿಪಾತ್ರದಲ್ಲಿರುವ ದೇವಾಲಯಗಳಲ್ಲೂ ನೀರು ಪ್ರವೇಶಿಸುತ್ತದೆ. ಇದು ಪ್ರತಿ ವರ್ಷ ನಡೆಯುವ ಸಹಜ. ಆದರೆ, ಇಲಿ ಬಂದರೆ ಹುಲಿ ಹೋಯಿತು ಎನ್ನುವಂತೆ ಈ ಕ್ರಿಯೆಯನ್ನೇ ಭಯಂಕರವಾಗಿ ಕಾಣುವುದು ಸಾರ್ವಜನಿಕರಲ್ಲಿ ಮತ್ತುಷ್ಟು ಆತಂಕಕ್ಕೆ ಕಾರಣವಾಗುತ್ತದೆ. ಇದೇ ನೀರು ಮತ್ತು ಮಳೆಯಿಂದ ಇಳೆ ಹಸಿರು ತೊಡುವ ಸೌಭಾಗದ ಆಶಾವಾದ ಪ್ರಧಾನವಾಗುವುದಿಲ್ಲ. ಅನ್ನ ನೀಡುವ ರೈತರ ಜೀವಕಳೆ ತುಂಬಿ ಕ್ರಿಯೆಯನ್ನು ಸಂಭ್ರಮಿಸಿದರೆ ರೈತ ಇನ್ನಷ್ಟು ಉತ್ಸಾಭರಿತನಾಗುತ್ತಾನೆ.
ಮುಂಗಾರು ಮಳೆ- ಬೆಳೆಯ ಬಗ್ಗೆ ಬೆಳಗಾವಿ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಚ್.ಡಿ. ಕೋಳೇಕರ ಅವರು ದೂರದರ್ಶನ ಹಾಗೂ ಆಕಾಶವಾಣಿಗೆ ವಿವರವಾದ ಮಾಹಿತಿ ನೀಡಿದ ಪ್ರಕಾರ, ಪೂರ್ವ ಮುಂಗಾರು ವಾಡಿಕೆಯಂತೆ ಬೆಳಗಾವಿ ಜಿಲ್ಲೆಯಲ್ಲಿ ೯೩ ಮಿ.ಮೀ. ಮಳೆಯಾಗಬೇಕಾದದ್ದು ೧೧೦ ಮಿಮೀ ಮಳೆಯಾಗಿ ರೈತರ ಬಿತ್ತನೆಗೆ ಅನುಕೂಲ ಮಾಡಿಕೊಟ್ಟಿತು. ಸಹಜವಾಗಿ ಕೃಷಿ ಇಲಾಖೆ ಜಿಲ್ಲೆಯ ೧೭೦ ಕೃಷಿ ಕೇಂದ್ರಗಳ ಮೂಲಕ ಬಿತ್ತನೆ ಬೀಜ ರಸಗೊಬ್ಬರ ಪೂರೈಕೆಗೆ ಕ್ರಮ ತೆಗೆದುಕೊಂಡಿತ್ತು. ಆದರೆ ಮೇ ಕೊನೆಯಲ್ಲಿ ಮತ್ತು ಜೂನ ಆರಂಭದಲ್ಲಿ ರೋಹಿಣಿ ಮತ್ತು ಮೃಗಶಿರ ಮಳೆ ನಿಗದಿ ಪ್ರಮಾಣದಲ್ಲಿ ಆಗದೇ ಇರುವುದರಿಂದ ಜೂನ ತಿಂಗಳಿನಲ್ಲಿ ವಾಡಿಕೆಯಂತೆ ೧೪೬ ಮಿಮೀ ಆಗಬೇಕಾದ ಮಳೆ ೧೦೪ ಆಯಿತು. ಇದರಿಂದ ೨೯ ಮಿಮೀ ಮಳೆಯ ಕೊರತೆಯುಂಟಾಯಿತು. ಈ ಮಳೆಯ ಹದವನ್ನೇ ಉಪಯೋಗಿಸಿಕೊಂಡ ರೈತರು ಶೇಕಡಾ ೮೦ ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಳಿಸಿದರು. ಆದರೆ, ಸವದತ್ತಿ, ರಾಮದುರ್ಗ ತಾಲೂಕಿನ ಪ್ರದೇಶಗಳಲ್ಲಿ ಮಳೆಯ ತೀರ ಕೊರತೆಯಿಂದ ಬಿತ್ತನೆ ಕಾರ್ಯ ಕುಂಟಿತಗೊಂಡಿತು. ಈ ಮಧ್ಯ ಶೇಕಡಾ ೮೦ ರಷ್ಟು ಆದ ಬಿತ್ತನೆಯಲ್ಲಿ ಮಳೆಯನ್ನೇ ಆಶ್ರಯಿಸಿದ ಬೆಳೆ ನೀರಿನ ಕೊರತೆಯಿಂದ ಹಳದಿಗೆ ತಿರಗಲು ಮತ್ತು ಕೆಲವುಕಡೆ ಒಣಗಲು ಪ್ರಾರಂಭಿಸುತ್ತಿದ್ದಂತೆ ಇದೀಗ ಜುಲೈ ಮೊದಲವಾರದಲ್ಲಿ ನಿಗದಿ ಪ್ರಮಾಣಕ್ಕಿಂತ ಹೆಚ್ಚು ಅಂದರೆ ೧೩೪ ಮಿಮೀಗಿಂತ ಹೆಚ್ಚು ಮಳೆಯಾಗಿ ಜೀವ ತುಂಬಿ ಹಸಿರು ತೊಡಿಸಿ ರೈತನ ಉಲ್ಲಾಸಕ್ಕೆ ಕಾರಣವಾಗಿದೆ. ಇಂದು ಜಿಲ್ಲೆಯಲ್ಲಿ ೭ ಲಕ್ಷ ೫೨ ಸಾವಿರದ ೩೧೨ ಹೆಕ್ಟರ್ ಪ್ರದೇಶದಲ್ಲಿ ಸೂಯಾಬಿನ್, ಹೆಸರು, ಉದ್ದು ಧಾನ್ಯಗಳ ಬಿತ್ತನೆ ಪೂರ್ಣಪ್ರಮಾಣದಲ್ಲಿ ಆಗಿದೆ. ಗೋವಿನ ಜೋಳ, ಹತ್ತಿ, ಶೇಂಗಾ, ಭತ್ತ ಮತ್ತು ಕಬ್ಬಿನ ಲಾವಣಿ ಇನ್ನೂ ಶೇಕಡಾ ೨೦ ರಷ್ಟು ಆಗಬೇಕಾಗಿದೆ. ಪ್ರಸ್ತುತ ಸುರಿದ ಮಳೆಯಿಂದ ಈ ಬೆಳೆಗಳ ಬಿತ್ತನೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಆದರೆ, ಅತೀ ಹೆಚ್ಚು ಮಳೆಯಾಗುವ ಖಾನಾಪೂರ ಮತ್ತು ಬೆಳಗಾವಿ ತಾಲೂಕಿನಲ್ಲಿ ನಿಗದಿ ಪ್ರಮಾಣದಲ್ಲಿ ಮಳೆಯಾಗದೇ ಇರುವುದರಿಂದ ಭತ್ತದ ಬೆಳೆ ಹಿನ್ನಡೆಯಾಗಿದೆ ಎಂದು ಕೃಷಿ ಅಧಿಕಾರಿ ಎಚ್.ಡಿ. ಕೋಳೇಕರ ತಿಳಿಸಿದ್ದಾರೆ.
ಮಳೆಯ ಕೊರತೆಯ ಕಾರಣ ಜಿಲ್ಲೆಯ ಐದು ನದಿಗಳು ಬರಿದಾಗಿದ್ದವು, ಕೊಳಬಾವಿ, ಬಾವಿಗಳು ಖಾಲಿಯಾಗಿದ್ದವು, ಇದೀಗ ಸುರಿದ ಮಳೆಯಿಂದ ನದಿಗಳು ಮೈದುಂಬಿಕೊಂಡು ಮುಂದು ಸಾಗುತ್ತಿವೆ. ಬಾವಿಗಳ ನೀರಿನ ಪ್ರಮಾಣ ಏರುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆತಂತಾಗಿ ಸಾರ್ವಜನಿಕರಲ್ಲಿ ನೆಮ್ಮದಿ ಉಂಟಾಗಿದೆ.
***
ಈ ಲೇಖನ ಹಂಚಿಕೊಳ್ಳಿ