ವಿಟಿಯು ಜಾಗತಿಕ ಮಟ್ಟದ ಖ್ಯಾತಿಗೆ ಗುಣಮಟ್ಟದ ಶಿಕ್ಷಣ ಅಳವಡಿಕೆ ಅಗತ್ಯ : ಕುಲಪತಿ ವಿದ್ಯಾಶಂಕರ್ ಸಲಹೆ
ಅಸ್ಮಿತೆ ಸುದ್ದಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕಾಗಿದ್ದು, ಇದಕ್ಕೆ ಮತ್ತಷ್ಟು ಗುಣಮಟ್ಟ ಹೆಚ್ಚಿಸಿಕೊಳ್ಳುವ ಅಗತ್ಯವಿದ್ದು ಪ್ರಾಧ್ಯಾಪಕರು ಬೋಧನಾ ವಿಧಾನದಲ್ಲಿ ಮತ್ತಷ್ಟು ತಂತ್ರಜ್ಞಾನವನ್ನು ಅವಳಡಿಸಿಕೊಂಡು ಗುಣಮಟ್ಟ ಶಿಕ್ಷಣ ನೀಡಲು ಮುಂದಾಗಬೇಕೆಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ ಸಲಹೆ ನೀಡಿದ್ದಾರೆ.
ರಾಷ್ಟ್ರೀಯ ಮಾನ್ಯತಾ ಮಂಡಳಿ(ಎನ್ಬಿಎ) ಶ್ರೇಣಿ ಪಡೆಯುವ ಮಾನದಂಡ ಕುರಿತು ಪ್ರಾಧ್ಯಾಪಕರಿಗಾಗಿ ವಿಟಿಯು ಆಂತರಿಕ ಗುಣಮಟ್ಟ ಭರವಸೆಯ ಕೋಶ ಹಮ್ಮಿಕೊಂಡ ಎರಡು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗುಣಮಟ್ಟದ ಶಿಕ್ಷಣದ ಬೋಧನಾ ಕ್ರಮಗಳನ್ನು ಅನುಸರಿಸಲು ಅಗತ್ಯವಿರುವ ಗುಣಮಟ್ಟ ಕಟ್ಟಡಗಳು ಹಾಗೂ ಅಗತ್ಯ ಸೌಕರ್ಯಗಳನ್ನು ಒದಗಿಸಲು ಆಡಳಿತ ಮಂಡಳಿ ಸಿದ್ಧವಿದೆ. ಅದರ ಸದುಪಯೋಗಕ್ಕೆ ಪ್ರಾಧ್ಯಾಪಕರ ಸಿದ್ಧತೆ ಅಗತ್ಯವಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವವಿದ್ಯಾಲಯ ಉತ್ತಮ ಶ್ರೇಣಿಯೊಂದಿಗೆ ಖ್ಯಾತಿ ಪಡೆಯಬೇಕಾಗಿದೆ. ಇದಕ್ಕೆ ಎಲ್ಲ ಪ್ರಾಧ್ಯಾಪಕರು, ಸಿಬ್ಬಂದಿ ಸಮರ್ಪಣಾ ಭಾವದಿಂದ ಶ್ರಮಿಸಬೇಕಾಗಿದೆ ಎಂದು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸೂಚಿಸಿದರು.

ಎರಡು ದಿನ ನಡೆದ ಈ ಕಾರ್ಯಾಗಾರದಲ್ಲಿ ಮಾನ್ಯತೆ ಪಡೆಯಲು ಅನುಸರಿಸಬೇಕಾದ ಮಾನದಂಡಗಳು, ಔದ್ಯೋಗಿಕ ಆಧಾರಿತ ಶಿಕ್ಷಣ, ವಿಶ್ವವಿದ್ಯಾಲಯ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಗುಣಮಟ್ಟ ಸುಧಾರಣೆ ಕುರಿತು ಚರ್ಚೆ ನಡೆಸಲಾಯಿತು.
ಶಿಕ್ಷಣ ತಜ್ಞರಾದ ಡಾ.ಆರ್.ವಿ.ರಂಗನಾಥ, ಡಾ.ಡಿ.ಶೇಷಚಲಂ, ಡಾ.ರವಿರಾಜ್ ಎಂ.ಕುಲಕರ್ಣಿ, ಐಕ್ಯೂಎಸ್ಸಿ ನಿರ್ದೇಶಕ ಡಾ.ಸಂತೋಷ್ ಎಂ.ನೇಜ್ಕರ್ ಹಾಗೂ ವಿಟಿಯು ವ್ಯಾಪ್ತಿಯ 220 ಎಂಜಿನಿಯರಿಂಗ್ ಕಾಲೇಜುಗಳ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.
***
ಈ ಲೇಖನ ಹಂಚಿಕೊಳ್ಳಿ