ಮೇಘಮೈತ್ರಿ ಸಾಹಿತ್ಯ ಸಂಭ್ರಮ: ಸಂಘ - ಸಂಸ್ಥೆಗಳ ಪ್ರಶಸ್ತಿ ಪ್ರದಾನ ಪರಂಪರೆ ಗೌರವಯುತ ಕಾರ್ಯ - ಎಚ್.ಐ. ತಿಮ್ಮಾಪುರ
ಅಸ್ಮಿತೆ ಸುದ್ದಿ : ಬಾಗಲಕೋಟ ಜಿಲ್ಲೆ ಕಮತಗಿ ಮೇಘಮೈತ್ರಿ ಸಾಹಿತ್ಯ ಸಂಘ ನಿಯೋಜಿತ ಕೃತಿ ಲೋಕಾರ್ಪಣೆ, ಉಪನ್ಯಾಸ, ಕವಿಗೋಷ್ಠಿ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ವರ್ಣರಂಚಿತ ಸಮಾರಂಭ ಜರುಗಿತು.
ವಿವಿಧ ಕ್ಷೇತ್ರಗಳಿಗೆ ಮೇಘಮೈತ್ರಿ ಸಂಸ್ಥೆ ಕೊಡಮಾಡುವ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದ ನಿವೃತ್ತ ಪ್ರಾಚಾರ್ಯ ಡಾ. ಎಚ್. ಐ. ತಿಮ್ಮಾಪುರ, "ಸರ್ಕಾರ ಮಟ್ಟದಲ್ಲಿ ನೀಡಲಾಗುವ ಪ್ರಶಸ್ತಿ ಸನ್ಮಾನಗಳು ಉನ್ನತ ಸಾಧಕ ಪರಿಚಿತ ವ್ಯಕ್ತಿತ್ವಗಳಿಗೆ. ಆದರೆ, ಎಲೆ ಮರೆಯ ಕಾಯಿಯಂತೆ ಸಮಾಜದಲ್ಲಿ ಸೇವೆಯಲ್ಲಿರುವರನ್ನು ಹತ್ತಿರದಿಂದ ಗಮನಿಸಿ ಸಂಘ ಸಂಸ್ಥೆಗಳು ಗೌರವ ಸಮ್ಮಾನ ನೆರವೇರಿಸುತ್ತವೆ. ಇಂಥ ಪರಂಪರೆಯ ದ್ಯುತಕವಾಗಿ ಕಮತಗಿ ಮೇಘಮೈತ್ರಿ ಸಾಹಿತ್ಯ ಸಂಘ ಒಂದು ಸಂಭ್ರಮವನ್ನಾಗಿ ಮುಂದುವರೆಸುತ್ತಿರುವುದು ಶ್ಲಾಘನೀಯ" ಎಂದು ಮೆಚ್ಚುಗೆ ಸೂಚಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಬೆಳಗಾವಿ ಮಹಾನಗರ ಪಾಲಿಕೆ ಉಪ ಆಯುಕ್ತ ಸಿದ್ದು ಹುಲ್ಲೊಳ್ಳಿ, "ಸಾಹಿತ್ಯ - ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಂಪ್ರದಾಯಿಕ ರೂಪರೇಷ ಬದಲಾಯಿಸಿ ಸಮಯ ಪ್ರಜ್ಞೆಯೊಂದಿಗೆ ಸುಧಾರಣೆ ತಂದುಕೊಳ್ಳುವುದು ಹೆಚ್ಚು ಅಗತ್ಯವಿದೆ" ಎಂದರು.
ಬೆಳಗಾವಿ ಮಾರ್ಕೇಟ್ ಪೊಲೀಸ್ ಠಾಣೆಯ ಸಿಪಿಐ ಜೆ.ಎಂ. ಕಾಲಿಮಿರ್ಚಿ, ಬೆಳಗಾವಿಯಲ್ಲಿ ಕನ್ನಡಮಯ ವಾತಾವರಣ ನಿರ್ಮಿಸುವಲ್ಲಿ ಕನ್ನಡಪರ ಸಂಘಟನೆಗಳು ಹಾಗೂ ಬರಹಗಾರರ ಮಾಡಿದ ಕಾರ್ಯ ಸಾಧನೆ ಅನುಪಮವಾದದ್ದು ಎಂದು ಸ್ಮರಿಸಿಕೊಂಡರು.
ದಿವ್ಯ ಸಾನಿಧ್ಯ ವಹಿಸಿದ್ದ ಕೂಡಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮಿಜಿಯವರು, ಪ್ರಸ್ತುತ ಸಮಾಜದಲ್ಲಿ ಹಲವಾರು ಸಾಮಾಜಿಕ ಪ್ರಶ್ನೆಗಳು ನಮ್ಮೆದುರಿಗಿದ್ದು ಅವುಗಳಿಗೆ ಸೂಕ್ತಉತ್ತರ ಕಂಡುಕೊಳ್ಳುವ ಕೆಲಸ ಸಂವೇದನಾಶೀಲ ಬರಹಗಾರರಿಂದ ನಡೆಯಬೇಕು. ಈ ಭಾಗದ ಬಸವರಾಜ ಕಟ್ಟಿಮನಿ ಈ ರೀತಿ ಬರೆದ ನಾಡಿನ ಅತೀ ದೊಡ್ಡ ಬರಹಗಾರರು ಎಂದು ಸ್ಮರಿಸಿಕೊಂಡರು.
ಬೆಳಗಾವಿ ಲಿಂಗರಾಜ್ ಕಾಲೇಜಿನ ಪ್ರಾಚಾರ್ಯ ಡಾ. ಹನುಮಂತ ಮೇಲಿಮನಿ, ಮನಸಲಾಜಿ ಆಫ್ ಮಾನಿನಿ, ಕವನ ಕೌಸ್ತುಭ ಮತ್ತು ವಚನ ವೈಭವ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.

ಮೇಘಮೈತ್ರಿ ಸಂಘದ ಅಧ್ಯಕ್ಷ ಎಂ. ರಮೇಶ, ಸಂಘದ ಸಾಹಿತ್ಯ - ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಪರಂಪರೆ ಕುರಿತು ಮಾಹಿತಿ ನೀಡಿದರು. ಸಂಘದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಪ್ರಕಾಶ ನರಗುಂದ ಆಶಯ ಮಾತಗಳನ್ನಾಡಿದರು.
ವೇದಿಕೆಯ ಮೇಲೆ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಯಲ್ಲಪ್ಪ ಹಿಮ್ಮಡಿ, ಲೇಖಕ ಯ.ರು. ಪಾಟೀಲ, ಸಾಮ್ಯುಯೆಲ್ ಡೇನಿಯಲ್, ಚಂದ್ರಶೇಖರ ದೇಸಾಯಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು
ನಂತರ ಡಾ. ಎಚ್. ಐ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಅನೇಕ ಕವಿಗಳು ಸ್ವರಚಿತ ಕವಿತೆಗಳನ್ನು ನಿರೂಪಿಸಿದರು. ಕಾವ್ಯ ರಚನೆ ಕುರಿತು ಡಾ. ಕೆ. ಎನ್. ದೊಡ್ಡಮನಿ ಮಾತನಾಡಿದರು.
ಪ್ರಾಧ್ಯಾಪಕ ಅಶೋಕ ಕಾಂಬಳೆ ಸ್ವಾಗತಗೀತೆ ಹಾಡಿದರು. ಡಾ. ಅನುರಾಧಾ ಕಂಚಿ ಕಾರ್ಯಕ್ರಮ ನಿರೂಪಿಸಿದರು.
ಈ ಲೇಖನ ಹಂಚಿಕೊಳ್ಳಿ